ಸುಲೋಚನಾ (ಆಂಗ್ಲ:) (೧೯೫೦-೨೦೦೯), ಸುಗಮ ಸಂಗೀತ ಮತ್ತು ಚಲನಚಿತ್ರ ಗೀತೆಗಳ ಹಾಡುಗಾರಿಕೆಗೆ ಹೆಸರಾದ ಕನ್ನಡದ ಗಾಯಕಿ. 'ಎಲ್ಲಿ ಜಾರಿತೋ ಮನವು', 'ಅತ್ತಿತ್ತ ನೋಡದಿರು' ಮುಂತಾದವು ಅವರ ಜನಪ್ರಿಯ ಭಾವಗೀತೆಗಳಾದರೆ, 'ನೇಸರ ನೋಡು', 'ಇದು ರಾಮಮಂದಿರ', 'ಆನೆಯ ಮೇಲೆ ಅಂಬಾರಿ ಕಂಡೆ' ಮುಂತಾದವು ಅವರ ಪ್ರಸಿದ್ಧ ಚಲನಚಿತ್ರ ಗೀತೆಗಳು. == ವೈಯಕ್ತಿಕ ಜೀವನ == ಸುಲೋಚನಾ ೧೯೫೦ರಲ್ಲಿ ಕರ್ನಾಟಕದ ಸಂಗೀತದ ಮನೆತನವೊಂದರಲ್ಲಿ ಹುಟ್ಟಿದರು. ಅವರ ತಾಯಿ ಪದ್ಮಾವತಮ್ಮ ಸಹ ಹಾಡುಗಾತಿಯಾಗಿದ್ದರು. ವೆಂಕಟೇಶ್ ಎಂಬುವವರನ್ನು ಮದುವೆಯಾಗಿದ್ದ ಸುಲೋಚನಾ ಅವರಿಗೆ ಎರಡು ಮಕ್ಕಳಿದ್ದಾರೆ. == ಗಾಯಕಿಯಾಗಿ == ಬಾಲ್ಯದಿಂದಲೇ ಸಂಗೀತಾಸಕ್ತರಾದ ಸುಲೋಚನಾ ಸುಗಮಸಂಗೀತವನ್ನು ಮೈಸೂರು ಅನಂತಸ್ವಾಮಿ ಮತ್ತು ನಾರಾಯಣ ಮಾನೆ ಅವರ ಬಳಿ; ಆರ್. ಕೆ. ಪದ್ಮನಾಭ ಅವರ ಬಳಿ ಕರ್ನಾಟಕ ಸಂಗೀತ ಮತ್ತು ರಾಜಭಾವೋ ಸೊಂಟಕ್ಕಿ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. === ಭಾವಗೀತೆಗಳು === ಸುಲೋಚನಾ ಮೊದಲು ರಂಗಭೂಮಿಯ ನಾಟಕಗಳಲ್ಲಿ ಗಾಯಕಿಯಾಗಿ ತೊಡಗಿಸಿಕೊಂಡರು. ಆ ಬಳಿಕ ಮೈಸೂರು ಅನಂತಸ್ವಾಮಿ ಅವರ ಭಾವಗೀತೆಗಳಿಗೆ ಗಾಯಕಿಯಾಗಿ ಆಯ್ಕೆಯಾದರು. 'ಭಾವಸಂಗಮ' ಧ್ವನಿಸುರುಳಿಯ ಸುಲೋಚನಾ ಅವರ ’ಎಲ್ಲಿ ಜಾರಿತೋ ಮನವು’ ಭಾವಗೀತೆ ಜನಜನಿತವಾಯಿತು. === ಚಿತ್ರಗೀತೆಗಳು === ಸುಗಮಸಂಗೀತದಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆ ಸುಲೋಚನಾ ಅವರಿಗೆ ಚಿತ್ರರಂಗದಿಂದ ಅವಕಾಶಗಳು ಬಂದವು. ಅವರ ಮೊದಲ ಹಾಡು ೧೯೭೭ರಲ್ಲಿ ಬಂದ ಕಾಕನ ಕೋಟೆ ಚಿತ್ರದ ನೇಸರ ನೋಡು ನೇಸರ ನೋಡು ಹಾಡು. ಸಿ. ಅಶ್ವತ್ ಅವರ ಸಂಯೋಜನೆಯ ಈ ಹಾಡು ಪ್ರಸಿದ್ಧವಾಯಿತು. ಮುಂದೆ ರಾಜನ್ ನಾಗೇಂದ್ರ, ಉಪೇಂದ್ರಕುಮಾರ್ ಮುಂತಾದವರ ನಿರ್ದೇಶನದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ, ರಾಜಕುಮಾರ್ ಮುಂತಾದವರೊಡನೆ ಹಲವಾರು ಹಾಡುಗಳನ್ನು ಸುಲೋಚನಾ ಹಾಡಿದ್ದಾರೆ. == ಪ್ರಶಸ್ತಿಗಳು == ೧೯೯೬-೬೭: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 'ಕರ್ನಾಟಕ ಕಲಾಶ್ರೀ ಪ್ರಶಸ್ತಿ' == ನಿಧನ == ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸುಲೋಚನಾ, ೨೦೦೯ರ ಮಾರ್ಚ್ ೨ರಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ ೫೯ ವರ್ಷ ವಯಸ್ಸಾಗಿತ್ತು. == ಜನಪ್ರಿಯ ಹಾಡುಗಳು == ಚಿತ್ರಗೀತೆಗಳು ನೇಸರ ನೋಡು ನೇಸರ ನೋಡು (ಕಾಕನ ಕೋಟೆ) ಶರಣಾಗಿ ಬಂದಿರುವೆ ಶಿವಶಂಕರ (ಬೆಕ್ಕಿನ ಕಣ್ಣು) ಆನೆಯ ಮೇಲೆ ಅಂಬಾರಿ ಕಂಡೆ (ಹಾಲು ಜೇನು) ಇದು ರಾಮಮಂದಿರ ನೀ ರಾಮಚಂದಿರ (ರವಿಚಂದ್ರ) ಒಂದು ಮಾತು ನಂಗ್ ಗೊತ್ತು (ಕಾಮನಬಿಲ್ಲು) ನೀನಾಡದ ಮಾತು ಮಾತಲ್ಲ ಮುಂತಾದವು == ಉಲ್ಲೇಖಗಳು ==